ಸ್ನೇಹಕೃಪಾ ಮೂವೀಸ್ ಲಾಂಛನದಲ್ಲಿ ನಿರ್ಮಾಣಗೊಳ್ಳುತ್ತಿರುವ ನಾನು ಹೇಮಂತ್ ಅವಳು ಸೇವಂತಿ ಎಂಬ ಟೈಟಲ್, ನಗೋದಕ್ಕೆ ಕಂಜೂಸ್ ಯಾಕೆ ಎಂಬ ಅಡಿಬರಹದ ಕನ್ನಡ ಚಿತ್ರ ಇದೇ ತಿಂಗಳು ಕೊನೆಯ ವಾರದಲ್ಲಿ ಆರಂಭಗೊಳ್ಳಲಿದೆ. ಯಶಸ್ವಿ ದೇವೆರ್ ತುಳು ಚಿತ್ರದ ನಂತರ ಕಿರುತೆರೆಯಲ್ಲಿ ಕಂಜೂಸ್ ಕಮಂಗಿರಾಯ ಧಾರಾವಾಹಿ ಮುಗಿಸಿದ ಸುಧಾಕರ್ ಬನ್ನಂಜೆ ಅವರು ತಮ್ಮ ಗೆಳೆಯರ ಜೊತೆಗೂಡಿ ನಿರ್ಮಿಸುತ್ತಿರುವ ಈ ಚಿತ್ರದ ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನದ ಹೊಣೆ ಹೊತ್ತಿದ್ದಾರೆ. ನಾಗರಾಜ್ ಅದ್ವಾನಿ ಛಾಯಾಗ್ರಹಣ, ಮದನ್-ಮೋಹನ್ ಸಂಗೀತ, ಗಿರೀಶ್ ಕುಮಾರ್ -ಸಂಕಲನ, ತಮ್ಮ ಲಕ್ಷ್ಮಣ್-ಕಲಾನಿರ್ದೇಶನ, ಅರಸು-ನಿರ್ಮಾಣ ನಿರ್ವಹಣೆ ಈ ಚಿತ್ರದಲ್ಲಿ ರಜನೀಶ್ ಮತ್ತು ವಿಜೇಶ್ ಎಂಬ ಇಬ್ಬರು ಹೊಸ ನಾಯಕರು ಪರಿಚಯವಾಗುತ್ತಿದ್ದಾರೆ. ನಾಯಕಿ ಹಾಗೂ ಇತರ ಪಾತ್ರಗಳ ಆಯ್ಕೆ ನಡೆಯುತ್ತಿದೆ. ಅಲ್ಲದೆ ಕನ್ನಡ ಚಿತ್ರರಂಗದ ಹೆಸರಾಂತ ಹಾಸ್ಯ ನಟರು ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ದಿನನಿತ್ಯದ ಜಂಜಾಟದ ಬದುಕಿನಲ್ಲಿ ಜನರಿಗೆ ನಗುವಿನ ಅಗತ್ಯ ಬಹಳ ಇದೆ. ೨ ಗಂಟೆಗಳ ಕಾಲ ಜನರನ್ನು ನಗಿಸುವ ಈ ಚಿತ್ರ ಸಂಗೀತ, ಲವ್, ಸೆಂಟಿಮೆಂಟ್, ಕಮರ್ಶಿಯಲ್ ಅಂಶಗಳನ್ನು ಒಳಗೊಂಡಿದೆ.